ಬೆಂಗಳೂರಿನ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಮಹಿಳೆಯರ ಗ್ಯಾಂಗ್ ಅನ್ನು ಚಾಣಾಕ್ಷ ಮಹಿಳಾ ಕಂಡಕ್ಟರ್ ಹಾಗೂ ಚಾಲಕರ ಜಾಗರೂಕತೆಯಿಂದ ಬಂಧಿಸಲಾಗಿದೆ. ಕಳ್ಳತನ ನಡೆಯುತ್ತಿರುವುದನ್ನು ಗಮನಿಸಿದ ಕಂಡಕ್ಟರ್, ಚಾಲಕರಿಗೆ ಮಾಹಿತಿ ನೀಡಿದ್ದು, ಬಸ್ಸಿನ ಬಾಗಿಲು ಹಾಕಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕಳ್ಳತನ ಮಾಡಿದ ವಸ್ತುಗಳನ್ನು ಕಳ್ಳರು ಬಸ್ಸಿನಲ್ಲಿ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ಮಾರ್ಚ್ 14: ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸೋಮವಾರ (ಮಾ. 10) ರಾತ್ರಿ 7:15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ. ಬಸ್ (BUS) ಪ್ರಯಾಣದ ವೇಳೆ ಪಕ್ಕದಲ್ಲಿದ್ದ ಮಹಿಳೆ ಬ್ಯಾಗ್ನಿಂದ ಓರ್ವ ಕಳ್ಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದಳು. ಇದನ್ನು, ನೋಡಿದ ಮಹಿಳಾ ಕಂಡಕ್ಟರ್ ಚಾಲಕ ಮುನಿರತ್ನ ಅವರಿಗೆ ವಿಚಾರ ತಿಳಿಸಿದ್ದಾರೆ.
ಬಸ್ ಡೋರ್ ಲಾಕ್ ಮಾಡಿ ಪೋಲಿಸರು ಬರುವರೆಗೂ ಬಸ್ ನಿಲ್ಲಿಸಿ ಎಂದು ಹೇಳಿದ್ದಾರೆ. ಮಹಿಳಾ ಕಂಡಕ್ಟರ್ ಮಾತನಿನಂತೆ ಚಾಲಕ ಡೋರ್ ಲಾಕ್ ಮಾಡಿ, ಪೊಲೀಸರು ಬರುವವರೆಗೂ ಬಸ್ ನಿಲ್ಲಿಸಿದ್ದಾರೆ. ಚಾಲಕ ಡೋರ್ ಲಾಕ್ ಮಾಡ್ತಿದ್ದಂತೆ ಕಳ್ಳಿಯರು ಮಗು ಅಳುತ್ತಿದೆ. ನಾವು ಹೋಗಬೇಕೆಂದು ನಾಟಕವಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಚಾಲಕ ಮಂಜುನಾಥ್ ಡೋರ್ ತೆರೆಯಲಿಲ್ಲ. ಬಳಿಕ, ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಳ್ಳಿಯರು ಸೀಟ್ ಕೆಳಗೆ ಬಿಸಾಡಿದ್ದಾರೆ. ಪೋಲಿಸರು ಬಂದ ಮೇಲೆ ಮಹಿಳೆಯರ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ತುಂಬ ಬಂಗಾರ ಮತ್ತು ಸಾಕಷ್ಟು ಮೊಬೈಲ್ ಪೋನ್ ಪತ್ತೆಯಾಗಿವೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂರ್ತಿ (27) ಬಂಧಿತ ಆರೋಪಿ. ಫೆಬ್ರವರಿ 28ರಂದು ಬಂಡೇಪಾಳ್ಯದ ಅಣ್ಣಮ್ಮನ ಪಾಳ್ಯದಲ್ಲಿನ ಮನೆ ಕಳ್ಳತನ ಮಾಡಿದ್ದನು. ಬಂಧಿತನ ಬಳಿ ಇದ್ದ 84 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶ್ಯಾಮರಾಜಪುರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಸಂಜಯ್ನನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 5ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಆರೋಪಿ ಕದ್ದಿದ್ದನು. ಸಂಜಯ್ ವಿರುದ್ಧ ಈ ಹಿಂದೆ ಮೂರು ಪ್ರಕರಣ ದಾಖಲಾಗಿದ್ದವು.