ಬಾಗಲಕೋಟೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪೊಲೀಸರು ಸಿಟಿ ರವಿ ಅವರನ್ನು ನಕಲಿ ಎನ್ಕೌಂಟರ್ ಮಾಡುವ ವಿಚಾರದಲ್ಲಿದ್ದರು ಎಂದು ಆರೋಪಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧವೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟಿ ರವಿ ಅವರ ಬಂಧನ ಮತ್ತು ಪೊಲೀಸರ ದುರ್ವರ್ತನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಲಾಗಿದೆ.
ಬಾಗಲಕೋಟೆ, ಡಿಸೆಂಬರ್ 21: ಸಿಟಿ ರವಿ ಅವರನ್ನ ಫೇಕ್ಎನ್ಕೌಂಟರ್ ಮಾಡುವ ವಿಚಾರ ಪೊಲೀಸರಿಗೆ ಇತ್ತು ಅನಿಸುತ್ತೆ. ನಾವು ಏನು ಮಾಡಬೇಕು ಅದನ್ನ ನಾವು ಮಾಡುತ್ತೇವೆ. ಈ ಬಗ್ಗೆ ನಾವು ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪ ಮಾಡಿದ್ದಾರೆ.
ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ: ಜೋಶಿ ಗರಂ
ಕಾನೂನು ಸಮಾಲೋಚನೆ ತೆಗೆದುಕೊಳ್ಳಲಿಕ್ಕೆ ನಾನು ಸಿಟಿ ರವಿಗೆ ಹೇಳಿದ್ದೇನೆ. ಆ ಪ್ರಕಾರ ಅವರು ಕಾನೂನು ಹೋರಾಟ ಮಾಡುತ್ತಾರೆ. ಸಿಟಿ ರವಿ ಅವರನ್ನ ಬಂಧನ ಮಾಡಿದ ನಂತರ ಅದೇ ದಿನ ರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ನಿಲ್ಲಿಸುತ್ತಾರೆ. ಇಡೀ ರಾತ್ರಿ ಎಲ್ಲಾ ಕರೆದುಕೊಂಡು ತಮಗೆ ಸಂಬಂಧವಿಲ್ಲದ ಖಾನಾಪುರ ಬಾಗಲಕೋಟೆ, ಧಾರವಾಡ, ಗದಗ ವ್ಯಾಪ್ತಿಯಲ್ಲಿ ಓಡಾಡಿದ್ದಾರೆ. ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ. ತಮ ವ್ಯಾಪ್ತಿಯಲ್ಲಿ ಬರ ಜಾಗದಲ್ಲಿ ಓಡಾಡಿಸಿದ್ದಾರೆ ಎಂದು ಗರಂ ಆಗಿದ್ದಾರೆ.
ಬನಹಟ್ಟಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಇನ್ನು ಸಿಟಿ ರವಿ ಬಂಧನ ಮತ್ತು ಪೊಲೀಸರ ದುರ್ವರ್ತನೆ ಖಂಡಿಸಿ ಇಂದು ಜಿಲ್ಲೆಯ ಬನಹಟ್ಟಿ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಭದ್ರಣ್ಣವರ ಸರ್ಕಲ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ.