ಉತ್ತರ ಪ್ರದೇಶ | ಗಾಳಿಪಟ ದಾರ ತಯಾರಿಸುವ ಕಾರ್ಖಾನೆಯಲ್ಲಿ ಸ್ಫೋಟ: ಮೂವರು ಮೃತ್ಯು

ಬರೇಲಿ: ಗಾಳಿಪಟ ದಾರ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕ್ವಿಲ್ಲಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ ಸುಮಾರು 10 ಗಂಟೆಗೆ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮೂವರ ಪೈಕಿ ಕಾರ್ಖಾನೆಯ ಮಾಲಕರೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಗಾಳಿಪಟದ ದಾರಕ್ಕೆ ಲೇಪನ ಮಾಡಲು ಗಂಧಕ, ಪೊಟ್ಯಾಶ್ ಹಾಗೂ ಗಾಜನ್ನು ಮಿಶ್ರಣ ಮಾಡುವಾಗ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸಂಚಾರ) ತಿಳಿಸಿದ್ದಾರೆ.

ಮೃತರನ್ನು ಕಾರ್ಖಾನೆಯ ಮಾಲಕ ಆತಿಕ್ ರಾಝಾ ಖಾನ್ (45) ಹಾಗೂ ಉದ್ಯೋಗಿಗಳಾದ ಫೈಝಾನ್ (25) ಮತ್ತು ಸರ್ತಾಜ್ (20) ಎಂದು ಗುರುತಿಸಲಾಗಿದೆ.

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದ್ವಿತೀಯ ವೃತ್ತಾಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸ್ಫೋಟದ ತೀವ್ರತೆಗೆ ಆ ಪ್ರದೇಶದಲ್ಲಿನ ಜನರು ಗಾಬರಿಗೊಳಗಾದರು ಎಂದು ವರದಿಯಾಗಿದೆ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು