ಬೆಂಗಳೂರು: ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಅನಿವಾರ್ಯ ಎಂಬ ಚರ್ಚೆ ಆರಂಭಗೊಂಡಿದ್ದು, ಸಿದ್ದು ಆಪ್ತ ಬಣ ಪ್ರಯೋಗ ಮಾಡಿರುವ ಈ ಬಾಣ ವಿರೋಧಿ ಪಾಳಯದಲ್ಲೂ ತಳಮಳ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ದಾಖಲೆಯನ್ನು ಅವರು ಮುರಿಯಬೇಕೆಂದು ಸಿದ್ದರಾಮಯ್ಯ ಬಯಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಎರಡೂವರೆ ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕೆಂಬ ಒಪ್ಪಂದವಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇತ್ತೀಚೆಗೆ ಖಾಸಗಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ, ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆಯನ್ನು ಮುರಿಯಲು ಬಯಸುತ್ತಿರುವುದಾಗಿ ಹೇಳಿದ್ದರು, ಪಕ್ಷದಲ್ಲಿ ಬಹುಪಾಲು ಶಾಸಕರ ಬಲವಾದ ಬೆಂಬಲ ಸಿದ್ದರಾಮಯ್ಯ ಹೊಂದಿದ್ದಾರೆ ಎಂದು ತೋರುತ್ತಿರುವುದರಿಂದ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ಮಹತ್ವಾಕಾಂಕ್ಷೆಯನ್ನು ಇದು ಸೂಚಿಸುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅರಸು ಅವರಿಗೆ ಶಾಸಕರ ಬೆಂಬಲ ಇದ್ದುದ್ದರಿಂದ ಇಂದಿರಾ ಗಾಂಧಿ ಅರಸು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒಪ್ಪಿಕೊಂಡರು. “ಅರಸು ಮುಖ್ಯಮಂತ್ರಿಯಾದಾಗ ಸದನದ ಸದಸ್ಯರೂ ಆಗಿರಲಿಲ್ಲ, ಆದರೆ ಶಾಸಕರ ಅಪಾರ ಬೆಂಬಲ ಹೊಂದಿದ್ದರು, ಇದನ್ನು ಆಗಿನ ಎಐಸಿಸಿ ವೀಕ್ಷಕ ಉಮಾಶಂಕರ್ ದೀಕ್ಷಿತ್ ಗಮನಿಸಿ ಈ ವಿಷಯವನ್ನು ಇಂದಿರಾ ಗಾಂಧಿ ಅವರಿಗೆ ವರದಿ ಮಾಡಿದರು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನು ನಿರ್ಲಕ್ಷಿಸುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಅರಸು ಅವರ ದಾಖಲೆಯನ್ನು ಮುರಿಯುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. “ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಹೇಗೋ, ಜೆಡಿಎಸ್ಗೆ ಎಚ್.ಡಿ. ದೇವೇಗೌಡ ಹೇಗೋ, ಹಾಗೆಯೇ ಕಾಂಗ್ರೆಸ್ಗೆ ಸಿದ್ದರಾಮಯ್ಯ ಎಂದು ಅವರು ಹೇಳಿದರು. ಅರಸು ಏಳು ವರ್ಷ 238 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಜನವರಿ 2026 ರಲ್ಲಿ ಸಿದ್ದರಾಮಯ್ಯ ಆ ದಾಖಲೆ ಮುರಿಯಲಿದ್ದಾರೆ.
ಹೈಕಮಾಂಡ್, ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಬಯಸಿದರೆ ಶಾಸಕರ ವಿಶ್ವಾಸ ಗಳಿಸುವಂತೆ ಶಿವಕುಮಾರ್ ಸೇರಿದಂತೆ ಯಾವುದೇ ನಾಯಕರನ್ನು ಕೇಳುವ ಸಾಧ್ಯತೆಯಿದೆ. ಶಿವಕುಮಾರ್ ಶಾಸಕರ ಬೆಂಬಲ ಪಡೆಯುವವರೆಗೆ ಅಂದರೆ ಜನವರಿ 2026 ರವರೆಗೆ ‘ಗ್ರೇಸ್’ ಅವಧಿಯನ್ನು ಸಿಎಂ ಸಿದ್ದರಾಮಯ್ಯ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಅವರ ಫ್ರೈಡೇ ಮ್ಯಾನ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರ ತೀರ್ಮಾನ ಸಹ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರಿಗೂ ಪಕ್ಷದಲ್ಲಿ ಯಾರ್ಯಾರು ತಮ್ಮ ಪರ ಇದ್ದಾರೆ ಎಂಬುದು ಅವರಿಗೆ ತಿಳಿದಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.